Sunday, February 17, 2013

ನಾನೂ ಕಂಡೆ ಚಮಂತಕ ಮಣಿಯೊಂದನು...

          ಯಾಕೆ ಲೇಟು? ಎಂಬ ಚಿಕ್ಕ ಪ್ರಶ್ನೆಗೂ ನಮ್ಮ ಬಳಿ ಒಂದು ಉತ್ತರ ಸಿದ್ಧವಿರುತ್ತದೆ. ಟ್ರಾಫಿಕ್ ಜಾಮ್ ಎಂದೋ, ಗಾಡಿ ಕೈ ಕೊಟ್ಟಿತೆಂದೋ... ಯಾಕೆ ಪರೀಕ್ಷೆಯಲ್ಲಿ ಫೇಲಾದೆ? ಎಂಬ ದೊಡ್ಡ ಪ್ರಶ್ನೆಗೂ ನಮ್ಮಲ್ಲಿ ಉತ್ತರ ಸಿದ್ಧವಿರುತ್ತದೆ. ನಿರೀಕ್ಷಿಸಿದ ಪ್ರಶ್ನೆಗಳು ಬರಲಿಲ್ಲವೆಂದೋ, ಸರಿಯಾಗಿ ವ್ಯಾಲ್ಯುವೇಷನ್ ಆಗಿಲ್ಲವೆಂದೋ... ನಾವು ಕೊಡುವ ಸಮಜಾಯಷಿಗಳನ್ನು  ಎದುರಿನವರು ಒಪ್ಪಲಿ ಎಂಬುದಕ್ಕಿಂತ ನಮ್ಮ ಆತ್ಮಸಾಕ್ಷಿಯನ್ನು ಒಪ್ಪಿಸುವತ್ತ ನಮ್ಮ ಮಗ್ನತೆಯಿರುತ್ತದೆ. ಆದರೆ ಆ ಅನಾನುಕೂಲತೆಗಳನ್ನು ಮೀರಿ ಗುರಿ ತಲುಪುವ  ಸಾದ್ಯತೆಯಿತ್ತಾ? ಎಂಬುದನ್ನು ನಾವು ಯೋಚಿಸಲು ಹೋಗುವುದಿಲ್ಲ.
           ಇಷ್ಟೆಲ್ಲ ಚಿಂತಿಸಲು ಕಾರಣ ಇಂದು ಎ. ಆರ್. ಮಣಿಕಾಂತ್ರವರ 'ಅಪ್ಪ ಅಂದ್ರೆ ಆಕಾಶ' ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದೆ. ಮಣಿಕಾಂತರೆಂದೊಡನೆ ನನಗೆ ಮೊದಲು ನೆನಪಾಗುವುದು ಅವರು ಬರೆಯುತ್ತಿದ್ದ 'ಹಾಡು ಹುಟ್ಟಿದ ಸಮಯ' ಅಂಕಣ. ನಾನೂ ಸಿನಿಮಾ ವ್ಯವಸಾಯಿಯಾಗಿದ್ದರಿಂದಲೋ ಏನೋ ಆ ಅಂಕಣ ನನಗೆ ಬಹಳ ಆಪ್ತವಾಗಿತ್ತು. ಸತತ ಎರಡು ವರ್ಷಗಳ ಕಾಲ ಮೂಡಿಬಂದ ಅದು ಪ್ರತಿವಾರವೂ ಹಳೆಯ ಜನಪ್ರೀಯ ಕನ್ನಡ ಹಾಡೊಂದು ಹುಟ್ಟಿದ ಬಗೆ, ಅದು ಬೆಳೆದ ರೀತಿ, ಜನಪ್ರೀಯವಾದ ಪರಿಯನೆಲ್ಲ ವಿವರವಾಗಿ ಹೃದಯಕ್ಕೆ ನಾಟುವಂತೆ ಇವರಿಸುತ್ತಿದ್ದ ರೀತಿ ಅನನ್ಯ. ಗೀತರಚನೆಕಾರ, ಸಂಗೀತ ನಿರ್ದೇಶಕ, ಗಾಯಕ ಹೀಗೆ ಯಾರನ್ನು ಮಾತಾಡಿಸಲು ಸಾದ್ಯವೋ ಅವರನ್ನೆಲ್ಲ ಮಾತಾಡಿಸಿ, ಮಾಹಿತಿ ಕಲೆಹಾಕಿ ಅವರ ಮಾತಿನ ಲಹರಿಗೊಂದು ತಮ್ಮದೇ ಭಾವ ಲಹರಿಯನ್ನು ಬೆಸೆದು ಒಂದು ಸುಂದರ ಪದಚಿತ್ರಣವನ್ನೇ ಸೃಷ್ಟಿಸಿ ಆ ಕವನಕೊಂದು ಕಥನ ರೂಪಿಸುತ್ತಿದ್ದರು. ಅದಕ್ಕೇ ಹಾಡುಹುಟ್ಟಿದ ಸಮಯ ಅಂಕಣವನ್ನು ಓದುವಾಗಲೆಲ್ಲಾ ಅದೊಂದು ಉತ್ತಮ ಪರಿಶ್ರಮದ ಅಂಕಣವೆಂದೆನಿಸುತ್ತಿತ್ತು. ಆದರೆ ಇಂದು ಮಣಿಕಾಂತರನ್ನು ನೋಡಿದಾಗಲೇ ನನಗೆ ಗೊತ್ತಾಗಿದ್ದು ಅದು ಬರಿಯ ಉತ್ತಮ ಪರಿಶ್ರಮ ಮಾತ್ರವಲ್ಲ ಅದೊಂದು ವಿಶೇಷ ಪರಿಶ್ರಮ ಎಂದು. ಏಕೆಂದರೆ ಹಾಡೆಂಬುದು ಕೇಳುವಿಕೆಗೆ ಸಂಬಂಧಿಸಿದ್ದು. ಕೇಳುವಿಕೆಯೇ ಹಾಡಿನ ಮೇಲೊಂದು ಪ್ರೀತಿ, ಅದರ ಬಗ್ಗೆ ತಿಳಿದುಕೊಳ್ಳಬೇಕೆಂಬ ಉತ್ಸುಕತೆಯನ್ನು ಮೂಡಿಸಲು ಸಾದ್ಯ. ಆದರೆ ಮಣಿಕಾಂತರು ಶ್ರವಣದೋಷ ಹೊಂದಿದ ವ್ಯಕ್ತಿಯೆಂದು ನನಗೆ ಗೊತ್ತಾಗಿದ್ದೇ  ಇಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಗಣ್ಯರಾಡಿದ ಮಾತುಗಳಿಂದ. ಅವರದು ಬರೀ ಹಾಡು ಕೇಳಲಾಗದ ಅನಿವಾರ್ಯತೆ ಮಾತ್ರವಲ್ಲ, ಹಾಡು ಬರೆದವರು ತಮ್ಮ ಅನುಭವಗಳನ್ನು ಓತಪ್ರೋತವಾಗಿ ಹೇಳಿದರೆ ಅದನ್ನೂ  ಕೇಳಿಸಿಕೊಳ್ಳಲಾಗದ ಅಸಹಾಯಕತೆ. ಆದರೂ ಛಲಬಿಡದೇ ದೂರವಾಣಿಯಲ್ಲಿ ಮಾತನಾಡುವಾಗ ತಮ್ಮ ಧರ್ಮಪತ್ನಿ, ಮಗಳ ಸಹಾಯವನ್ನು ಪಡೆದು, ನೇರ ಸಂದರ್ಶನಕ್ಕೆ ಹೋದಾಗ ತಮ್ಮ ಸಹೋದ್ಯೋಗಿಯೊಬ್ಬರನ್ನು ಜೊತೆಗೊಯ್ದು ಅವರು ಹೇಳಿದ ವಿಷಯಗಳನ್ನೆಲ್ಲ ಕಷ್ಟಪಟ್ಟು ಮನನ ಮಾಡಿಕೊಂಡು ತಮ್ಮ ಹೃದಯಸ್ಪರ್ಷಿ  ಭಾವನೆಗಳ ಕುಂಚದಲ್ಲಿ ಬಿಡಿಸಿ 'ಹಾಡು ಹುಟ್ಟಿದ ಸಮಯ' ಎಂಬ ಅಂಕಣದಲ್ಲಿ ನಮ್ಮ ಮುಂದಿಡುತ್ತಿದ್ದರೆಂದರೆ ಅದು ವಿಶೇಷ ಪರಿಶ್ರಮವಲ್ಲದೇ ಮತ್ತಿನ್ನೇನು?  ಯಾವ ಹಾಡಿನ  ಬಗ್ಗೆ ಬರೆಯುವಾಗಲೂ ಶ್ರವಣದೋಷ ಎನ್ನುವುದು ಎಂದಿಗೂ ಅವರಿಗೆ ತಮ್ಮ ಕೆಲಸದಿಂದ ನುಣುಚಿಕೊಳ್ಳುವ ಸಾಧನವಾಗಲೇ ಇಲ್ಲ. 
          ಅವರು ಬರೆದ 'ಅಮ್ಮ ಹೇಳಿದ ಎಂಟು ಸುಳ್ಳುಗಳು', 'ಅಪ್ಪ ಅಂದ್ರೆ ಆಕಾಶ' ಪುಸ್ತಕಗಳಲ್ಲಿ ಸಮಾಜದಲ್ಲಿರುವ ತೆರೆಮರೆಯ ಅದೆಷ್ಟೋ ಸಾಧಕರನ್ನು ಕಥಾತ್ಮಕವಾಗಿ ಪರಿಚಯಿಸಿದ್ದಾರೆ. ನಮ್ಮವರ ನೋವುನಲಿವುಗಳನ್ನು ಕೇಳುವಷ್ಟೂ  ವ್ಯವಧಾನವಿಲ್ಲದ ನಮ್ಮಂತ ಅವಸರವಾದಿಗಳ ನಡುವೆ ಎ. ಆರ್. ಮಣೀಕಾಂತ್ರವರು ತಮ್ಮ ಶೃವಣದೋಷವನ್ನೂ ಮೀರಿ ಅದೆಷ್ಟೋ ಸಾಧಕರ ಸಾಧನೆಗಳಿಗೆ ಕಿವಿಯಾಗಿದ್ದಾರೆ. ಇದಲ್ಲವೇ ಸಾಧನೆಯೆಂದರೆ?

1 comment:

armanikanth said...

ಪ್ರಿಯರೆ,
ನಿಮ್ಮ ಅಭಿಮಾನದ ಮಾತುಗಳಿಗೆ ಋಣಿ...
ಪ್ರೀತಿಯಿಂದ..
ಮಣಿಕಾಂತ್.